ಬುಧವಾರ, ಏಪ್ರಿಲ್ 8, 2015

ಶುಭ ರಾತ್ರಿ ನಿನಗೆ......ಒಲವಿನಿಂದ


ಪ್ರತಿ ರಾತ್ರಿಯೂ ನಿದಿರೆ ನನ್ನ ಚುಂಬಿಸಿ ಆಲಂಗಿಸುವ ಮುನ್ನ ನಿನಗೆ ಮನದಲ್ಲಿ ಶುಭವ ಕೋರಿ ಕಂಗಳ ಸಂದಿಗಳ ಬಿಗಿಯುವೆ ನಿನ್ನ ಚಿತ್ರಗಳಿಂದ, ಚೈತ್ರ ಕಾಲದ ರಾತ್ರಿಗಳಲ್ಲಿ ಹೊರಗೆ ಬೀಸುವ ಗಾಳಿ ನಿಧಾನದಿ ಎಲೆಗಳ ಸವರಿ ನಲಿಯುವ ಪರಿಯಿಂದ ಪ್ರೇರಣೆಗೊಂಡು ಪ್ರಕಟಿಸುತ್ತಿರುವೆ ನನ್ನೀ ಭಾವನೆಗಳನ್ನ ...ನಿನ್ಮುಂದೆ ಹೇಳಲಾಗದೇ ಹೋದದ್ದೆ ಕಾರಣವಾಯಿತು ಇದರ ಉಗಮಕ್ಕೆ. ನೀನು ನಿನ್ನ ನೆಮ್ಮದಿಯ ನಿದಿರೆಗೆ ಜಾರುವ ಮುನ್ನ ಒಮ್ಮೆ ಕೇಳಿಸಿತೆ ಈ ಹಾಡು ಗೆಳತಿ "ಶುಭ ರಾತ್ರಿ ನಿನಗೆ"


ಶುಭ ರಾತ್ರಿ ನಿನಗೆ......ಒಲವಿನಿಂದ
--------------------------------------
ನನ್ನಾಸೆಯ ಹೂವ ಚೆಲ್ಲಿದ ಬೆಳದಿಂಗಳ ಮಂಚದಲಿ
ತೆಳು ನಡುವಿನ ಮೈ ಚಾಚಿ ಮಲಗು ಮೆಲ್ಲಗೆ ಚೆಲುವ ಹರಿಸುತ್ತ
ಸುತ್ತಲೂ ಹರಡಿ ಮೆರೆಯಲಿ ನಿನ್ನ ಸೊಬಗು ಪರಿಮಳದಲಿ

ಬಳಲಿಕೆಗಳೆಲ್ಲ ಕರಗಿ ಮಂದಹಾಸಗಳು ಮಿನುಗಲಿ ಸಣ್ಣ ಬೆಳಕಿನ ಹೊನಲಿನಲಿ
ನಿನಗಾಗಿಯೇ ನಾ ಗುನುಗುವ ಪ್ರೇಮಗೀತೆಗಳು ಜೋಗುಳವ ಹಾಡುತ್ತ
ಮೆಲುದನಿಯಲಿ ತೇಲಿ ಬಂದು ನಿನ್ನುಸಿರ ಚುಂಬಿಸಲಿ

ಸವಿಕನಸುಗಳ ತುಂತುರು ಮಳೆಹನಿಗಳಿಗೆ ತೋಯ್ದು ತೇವದಲಿ
ನಡುಗುತ್ತ ಕಳೆದ ದಾರಿಗಳಲಿ ನೆನಪುಗಳು ನನ್ನ ಸಹವಾಸಗಳ ಹುಡುಕುತ್ತ
ತುಸು ದೂರ ಸಾಗಿ ಬಯಸಿದಾಸರೆ ಸಿಕ್ಕು ಕುಣಿಯಲಿ ಹಿಗ್ಗಿನಲಿ

ಸುಖದ ಸೋಪಾನ ಪ್ರಣಯ ಝೇಂಕಾರ ಮಧುರ ಭಾವಯಾನದಲಿ
ಮತ್ತೇರಿ ಸುರತದಲಿ ಸೋತ ಮನಸು ಹಗುರವಾಗುತ್ತ
ನಿಶೆ ನಾಚುವಂತೆ ಸಾವಿಲ್ಲದ ಸಂಪ್ರೀತಿ ಹೊದ್ದು ಮೊಗದಲ್ಲಿ ನೀ ಮಲಗು ನೆಮ್ಮದಿಯ ನಿದಿರೆಯಲಿ

-ಕವೆಂಪ


ಸಹೃದಯಿಗಳ ಸಹಾಯಕ್ಕೆ ವಿಶೇಷ ಶಬ್ಧ-ಅರ್ಥಗಳು:
----------------------------------------------------
ಸೋಪಾನ = ಮೆಟ್ಟಿಲುಗಳು;  ಝೇಂಕಾರ =  ಧ್ವನಿ, ಮೊರೆತ ;  ಸುರತದಲಿ = ಮಿಲನದಲಿ; ನಿಶೆ = ರಾತ್ರಿ; ಸಂಪ್ರೀತಿ = ಅತಿಶಯವಾದ ಪ್ರೀತಿ

ಗುರುವಾರ, ಮಾರ್ಚ್ 26, 2015

ತುಂಬ ದಿನದ ಮೇಲೆ ನಿನ್ನೊಡನೆ ಮಾತು...


ನೀ ನನ್ನ ಭೇಟಿಯಾಗಲಿಲ್ಲ ಎಂದು ಹುಸಿ ಮುನಿಸಿನಿಂದ ಮಾತನಾಡದೆ ಸುಮ್ಮನಿದ್ದೆ ಹಲವು ದಿನ, ವಾರ, ತಿಂಗಳುಗಳು. ತಡೆಯಲಾಗಲಿಲ್ಲ ನೆನಪುಗಳು ಬಗ್ಗಿಸಿದಾಗ ನನ್ನ, ಒಲವು ಮುರಿದಾಗ ಮೌನ, ಮಾತನಾಡಿದೆ ಎಲ್ಲ ಮರೆತು. ಮಾತನಾಡುವಾಗ ನೀ ಮೊದಲು ಕೆಳಿದ್ದು - "ನೆನಪಿದ್ದೀನಾ ನಾನು ?" ಎಂದು. ನಾನೆಂದೆ "ನನ್ನ ಕ್ಷಣ ಕ್ಷಣಗಳಲ್ಲಿ ನೀನಿದ್ದಿಯ, ಮರೆಯುವದಾದರೂ ಹೇಗೆಂದು ?", ಮನಸೊಳಗೆ ಅಂದುಕೊಂಡದ್ದು "ನಾ ಸತ್ತರೂ ನಿನ್ನ ನೆನಪು ನನ್ನಲ್ಲಿ ಸಾಯುವುದಿಲ್ಲ, ಯಾಕೆಂದರೆ ನಿನ್ನನ್ನಾಗಲೇ ಇಲ್ಲಿ ಚಿತ್ರಿಸಿದ್ದೀನಿ, ಆ ಚಿತ್ರಗಳು ಅಮರತ್ವ ರಸವ ಹೀರಿ ನಗುತಿಹವು ಇಲ್ಲಿ ಕವಿತೆಗಳಾಗಿ" ಎಂದು. ನಿನ್ನೊಡನೆ ಮಾತನಾಡಿದ ಘಳಿಗೆಯಿಂದಲೇ, ತಡೆಯದ ಒಳ ಹರಿವು, ನೋವಿರದ ಒಳ ಸುಳಿಗಳ ತುಂಬಿಕೊಂಡು ದುಮ್ಮಿಕ್ಕಿ ಹರಿಯುತ್ತ ನದಿಗಳಾಗಿ ನಿನ್ನ ಮನವೆಂಬ ಕಡಲ ಸೇರಲು ಹಾತೊರೆಯುತ್ತ, ನೀ ನೇರವಾಗಿ ಹೇಳದೇ ಹೋದರೂ, ನಿನ್ನ ಪ್ರೇಮದ ಮಡಿಲಿಗೆ ನನ್ನ ಕರೆದಂತೆ ಅನ್ನಿಸುತ್ತಲೇ, ಈ ಪ್ರೆಮದ ಅಲೆಗಳೆಬ್ಬಿಸಿದ ದಾಂಧಲೆಗಳನ್ನ ಕಟ್ಟಿ ಹಾಕಿರುವೆ ಈ ಕೆಳಗಿನ ಸಾಲುಗಳಲ್ಲಿ.....


ತುಂಬ ದಿನದ ಮೇಲೆ ನಿನ್ನೊಡನೆ ಮಾತು...
------------------------------------------------
ತುಂಬ ದಿನದ ಮೇಲೆ ನಿನ್ನೊಡನೆ ಮಾತು
ಗಿರಿಶೃಂಗಗಳಲ್ಲಿ ಸ್ಯುಯೆಂದು ಬೀಸಿ ಬರುವ ತಂಪಿನ ಗಾಳಿ ತರುವ ಸಂಗೀತದಲೆಗಳ ನೆನಪಿಸಿತ್ತು
ಕಣ್ಮುಚ್ಚಿದರೂ, ತೆರೆದರೂ ಅವಿರತವಾಗಿ
ನಿನ್ನ ಕೈ ಹಿಡಿದುಕೊಂಡು ನನ್ನೆದೆಗೆ ಒತ್ತಿಕೊಂಡ
ಚಿತ್ರಗಳನ್ನ ನನ್ನೊಡಲಿಗೆ ಸೇರಿಸಿತ್ತು 
ದಿನವೂ ದುಮ್ಮಿಕ್ಕಿ ಎಲ್ಲ ಅಡೆ-ತಡೆಗಳ ಸೀಳಿ 
ಸಾವಿರ ನದಿಗಳಾಗಿ ಹರಿಯುತಿತ್ತು 
ನಿನ್ನ ಮನದ ಕಡಲ ಸೇರಲು

ಅಲೆ ಅಲೆಗಳಲ್ಲಿ ಇಂಪು ತಂದು ಮಧುರವಾಗಿ ಕರೆದಂತಿತ್ತು
ಸೋತ ವೀರನಿಗೆ ಮತ್ತೆ ಗೆಲ್ಲುವ ದಿವ್ಯಾಮೃತವೀಯುವ ಶಕ್ತಿ ಪಡೆದ
ನನಗಾಗಿ ತೆರೆದ ನಿನ್ನ ಪ್ರೇಮದ ಮಡಿಲು 
ನಿನ್ನ ಏಕಾಂತಗಳಲ್ಲಿ ಜೊತೆಯಾಗಲು

-ಕವೆಂಪ

ಶನಿವಾರ, ಮಾರ್ಚ್ 21, 2015

ಯುಗಾದಿಯ ಹೊಸ್ತಿಲಲ್ಲಿ...


ಈ ದಿನವೇ ಅಲ್ಲವೇ ಯುಗ ಆರಂಭವಾಗಿದ್ದು ? ನಮ್ಮ ಹಿರಿಯರು ದಿನ ವಾರ ತಿಂಗಳು ವರ್ಷಗಳ ಎಣಿಕೆಗೆ ಗುರುತು ಹಾಕಿದ್ದು, ಪ್ರಕೃತಿಯ ವಿವಿಧ ಬದಲಾವಣೆಗೆ ಕಾರಣವಾಗುವ ಈ ಆರಂಭ ಮನುಷ್ಯನ ಮೇಲಷ್ಟೆ ಅಲ್ಲ, ಎಲ್ಲ ಜೀವಿಗಳಲ್ಲಿ ನವ್ಯತೆಯನ್ನ ತಂದು ಕೊಟ್ಟು, ಬದುಕು ಕಷ್ಟ-ಸುಖಗಳ ಹೂರಣವೆಂದು, ಅವುಗಳದೇ ಲೋಕದಲ್ಲಿ ಪ್ರೀತಿಯಿಂದ ಸ್ನೇಹದಿಂದ ಹಾಡಲು ಸಹಕರಿಸುವುದು ನಿಜಕ್ಕೂ ಅದ್ಭುತವೇ ಸರಿ !


ಯುಗಾದಿಯ ಹೊಸ್ತಿಲಲ್ಲಿ
-------------------------

ಯುಗದ ಆದಿಯಿದು
ತಿರುಗೋ ಭುವಿಯ ಪ್ರೇಮವಿದು
ಒಲಿದು ಹೊಳೆವ ಸೃಷ್ಟಿಯ ಚೆಲುವಿದು

ಮಣ್ಣಿನಲ್ಲಿ ಮಿಂದುದ ಸಾಕೆಂದು
ಅನ್ನ ನೀಡುವವ ಬಂದು ನಿಂತನು ಊರಿನಲಿ ಹೊತ್ತು ಕಳೆಯಲು
ನೆವ ಬೇಕಿತ್ತು, ಹುಡುಕಿದನು...
ಕಂಡನು ಆಟಗಳ, ಜಾತ್ರೆಗಳ, ಮೋಜು ಮಸ್ತುಗಳ
ಹಂಚಿಕೊಳ್ಳಲು ಸಿಹಿ-ಕಹಿಗಳ, ಈ ಬಾಳಿನಲ್ಲಿ ಎಲ್ಲ ಸಮಪಾಲು

ಮನುಜನಿಗಷ್ಟೆ ಸೀಮಿತವಲ್ಲ ಬಯಕೆಗಳು
ಬಸಿರಾಗಿ, ಹಸಿರಾಗಿ ಚಿಗುರುವಾಸೆ ಒಣಗಿದ ಗಿಡ-ಮರ-ಬಳ್ಳಿಗಳಿಗೆ
ಬಿಸಿಲೊಡನೆ ವಿರಹ ಮರೆತ ಗಾಳಿ ಬೀಸಲು
ತಂಪಾಯಿತು ಉರಿದ ನೆಲವು

ಹರಿಯುತ್ತ ಮುಂಜಾನೆಯ ಆಗಸವು
ವೈವಾರದಿಂದ ರವಿಯನ್ನ ತನ್ನೆಡೆಗೆ ಸೆಳೆದುದ
ಕಣ್ತುಂಬಿ ನೋಡಿ ಹಾರಿದವು ಹಕ್ಕಿ ಸಂಕುಲ
ಸಾರುತ್ತ ಜೊತೆಯಲಿ ಇದು ವಸಂತ ಗಾನ ವೆಂದು ಚೈತ್ರ ಕಾಲವೆಂದು....
ಅರ್ಥವಾಗಲಿಲ್ಲವೇ ನಿಮಗೆ ?
ಇಂದು ಯುಗಾದಿ ಎಂದು

-ಕವೆಂಪ

ಹೊಸ ಕಾಲ ಬಂದಿದೆ ಈಗ, ಹೊಸ ದಿನಗಳು ಹೊಸ ಹುರುಪು ನೀಡಿ, ಹೊಸ ಸಾಧನೆಗಳಿಗೆ ಸ್ಪೂರ್ತಿಯಾಗಲಿ ದಿನ ದಿನವೂ. ಈ ದಿನ ಬೇವು ಬೆಲ್ಲ ಸವಿದು ಸಿಹಿ-ಕಹಿಗಳ ರುಚಿಯ ಅರಿಯಿರಿ, ಈ ಹಾಡಿನೊಂದಿಗೆ ನಿಮಗೆಲ್ಲ ಉಗಾದಿಯ, ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.

ಬುಧವಾರ, ಮಾರ್ಚ್ 18, 2015

ಡಿವಿಜಿ ಹಾಗು ಪುತಿನ ಅವರ ಜನುಮದಿನದ ಸಂದರ್ಭದಲ್ಲಿ.....



ನಿನ್ನೆಯ ದಿನ ಕನ್ನಡಿಗನೆಂದೂ ಮರೆಯದ ರೀತಿಯಲ್ಲಿ ಬದುಕಲೊಂದು ಗೀತೆಯನ್ನ ಕೊಟ್ಟ ಡಿವಿಜಿ ಅವರ, ಹಾಗೆ "ಸಂಪ್ರದಾಯಗಳ ಜಡತೆಯನ್ನ ದಾಟಿ ಅಧುನಿಕ ಬುದ್ಧಿ ಪ್ರಚುರವಾದ ವೈಚಾರಿಕತೆಯನ್ನು ತಮ್ಮ ಸೃಜನಶೀಲತೆಯ ಸಂಗಾತಿಯನ್ನಾಗಿ ಮಾಡಿಕೊಂಡ (ಈ ಸಾಲುಗಳನ್ನು ಪುತಿನ ಸಮಗ್ರ ಕಾವ್ಯದಲ್ಲಿ ಜಿಎಸ್ಎಸ್ ರವರು ಬರೆದ ಎರಡು ಮಾತುಗಳಿಂದ ಆಯ್ದುಕೊಳ್ಳಲಾಗಿದೆ) ಕವಿ ಪುತಿನ ಅವರ ಜನ್ಮ ದಿನ. ಈ ವಿಶೇಷ ಸಂದರ್ಭದಲ್ಲಿ ಅವರಿಗಾಗಿಯೇ ನನ್ನದೇ ಆದ ರೀತಿಯಲ್ಲಿ ನನಗೆ ತಿಳಿದಷ್ಟನ್ನ ಬರೆದು ಈ ನನ್ನ ಕಾವ್ಯ ನಮನಗಳ ಮೂಲಕ  ಅರ್ಪಿಸುತ್ತಿದ್ದೇನೆ.

ಡಿವಿಜಿಯವರಿಗೆ....
-------------------------------------
ಬೆಟ್ಟದಂತ ಪ್ರತಿಭೆಯಲ್ಲೂ ಹುಲ್ಲಾಗಿ
ಕಷ್ಟಗಳಲಿ ಕಲ್ಲಾಗಿ, ಮನೆಗೆ ಮಲ್ಲಿಗೆಯಾಗಿ
ಗಟ್ಟಿ ಕಾವ್ಯ ಸೃಷ್ಟಿ  ಮಾಡಿದರು

ಅಕ್ಕಿಯಲ್ಲಿ ಅನ್ನವನು, ಅಕ್ಷರದಲ್ಲಿ ಬರಹವನ್ನು
ಮೊದಲು ಕಂಡವರು ಯಾರೋ ?
ನಾವು ಕಂಡಂತೆ ಕನ್ನಡದಲ್ಲಿ ಭಗವದ್ಗೀತೆಯನ್ನ 
ನಮಗಾಗೆ ಮೊದಲು ನೀಡಿದವರಿವರು

ನಗಲು, ನಗಿಸಲು ಹೇಳಿ 
ನಗುವ ಕೇಳುತ ನಗುವುದು ಅತಿಶಯವೆಂದು 
ನಗುತ ಬಾಳುವ ವರವ ಪಡೆದರಿವರು 

ವಿಧಿಯಾಟವೇ ಬದುಕೆಂದರು
ಭುವಿಯ ಓಟದಲ್ಲಿ ಭವ ರೋಗಿಯಾಗದೆ
ವಿಧಿವಶನಾಗಿ ಬದುಕಿದರು



ಹಾಡು ಮಾಡಿದವರಿಗೆ....
-------------------------------------
ಮೈ ಮನಗಳ ಮಿಡಿವ ಹಾಡ ಮಾಡಿ 
ಹಾಡು ಹಾಡಿದವರದೆಂದು ಸಾರಿದ ಪರಿಗೆ
ಹಾಡ ಹಾಡಿದವರೆಲ್ಲ ಈಗ ಹಾಡು ಕೇಳುವವರದೆನ್ನಲು
ನಿಜದಿ ಹಾಡು ಯಾರದು ?

ಮೈ ಮುಪ್ಪ ದೂಡಿ ಮನದ ಚಿಂತೆ ಓಡಿ 
ಬಾಳು ಸನಿಹ, ಸಾವು ದೂರವಾಗುವ ನಂಬಿಕೆ ಕೊಡುವ
ಗೋವಿಂದನೂದುವ ಕೊಳಲ ಹಾಡು ಕೇಳಿದವರು 
ಹಾಡು ಭಾವಸಾರವ ಹೀರಿದೆದೆಯವರದು ಎನ್ನಲು
ನಿಜದಿ ಹಾಡು ಯಾರದು ?

ಮೈ ಮನಗಳ ಶಿಸ್ತಿನಿಂದ 
ನಡೆ ನುಡಿಯಲ್ಲಿ ಕೇಡೆಣಿಸದೆ ಹಂಗಿಲ್ಲದೆ
ಹಾಡುಗಳಲ್ಲೆ ಬದುಕಿ ಇಹ-ಪರಕೆ ಇಷ್ಟು
ಸಾಕೆಂದು ಬಯಸಿದವರಿಗೆ ಅರ್ಪಿತವಾದ ಈ ಹಾಡು ಕೇಳಿದೆ.
ನಿಜದಿ ಹಾಡು ಯಾರದೆಂದು ?